ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಮಹತ್ವದ ಕಾರ್ಯಾಚರಣೆ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ತಮಿಳು ನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿದ್ದಾರೆ.
ಸೋಮವಾರ (ಜ.20) ಸುದ್ದಿಗಾರರಿಗೆ ಈ ಕುರಿತು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಒಟ್ಟು ಎಂಟು ಪೊಲೀಸ್ ತಂಡಗಳನ್ನು ಮಾಡಲಾಗಿದ್ದು, ಮುಂಬೈ, ಕೇರಳ ತಮಿಳುನಾಡಿಗೆ ಪೊಲೀಸರು ಹೋಗಿದ್ದು, ಅಲ್ಲಿಂದ ಮಾಹಿತಿಯನ್ನು ಆಧರಿಸಿ, ತಿರುನಲ್ವೇಲಿಯಲ್ಲಿ ಮೂವರು ಸಿಕ್ಕಿಬಿದ್ದಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದ್ದು, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ನಂತರ ಹೆಚ್ಚಿನ ಮಾಹಿತಿಯ ಕುರಿತು ವಿವರಣೆ ನೀಡುವುದಾಗಿ ಹೇಳಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿಯ ಎಂಬಲ್ಲಿ ಮುರುಗನ್ ಡಿ.ದೇವರ್(35), ಯಶೋವಾ ರಾಜೇಂದ್ರನ್ ಮತ್ತು ಕಣ್ಣನ್ (36) ಎಂಬ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳಿಂದ ಕಾರು, ಎರಡು ಪಿಸ್ತೂಲ್, ಚೂರಿ, ನಗದು, ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾದ ಸೊತ್ತಿನ ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ.
ಆರೋಪಿಗಳು ದರೋಡೆ ಮಾಡಿದ ಬಳಿಕ ತಮಿಳುನಾಡಿಗೆ ಪರಾರಿಯಾಗಿದ್ದು, ಮಹಾರಾಷ್ಟ್ರ ಮೂಲದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನ ಇರುವ ಎರಡು ಗೋಣಿಯನ್ನು ವಶಕ್ಕೆ ಪಡೆಯಲಾಗಿದ್ದು, ಸ್ಥಳೀಯರು ಕೂಡಾ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಕೃತ್ಯಕ್ಕೆಂದು ಬಳಸಲಾಗಿದ್ದ ಕಾರನ್ನು ತಲಪಾಡಿ ಟೋಲ್ಗೇಟ್ನಲ್ಲಿ ಪಾಸ್ ಆಗಿರುವುದು ಗೊತ್ತಾಗಿತ್ತು. ಪೊಲೀಸರು ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.
ಫಿಯೆಟ್ ಕಾರು ನೀಡಿದ ಸುಳಿವು
ದರೋಡೆಕೋರರು ಕೃತ್ಯ ಎಸಗಲು ಬಳಸಿದ ಫಿಯೆಟ್ ಕಾರು ಪ್ರಕರಣ ಭೇದಿಸಲು ಬಹಳ ನೆರವಾಯಿತು ಎನ್ನಲಾಗಿದೆ.
ಮುಂಬಯಿಯಿಂದಲೇ ಈ ಕಾರನ್ನು ತಂದು ಅದಕ್ಕೆ ಕರ್ನಾಟಕದ ನಂಬರ್ ಪ್ಲೇಟ್ ಹಾಕಿದ್ದರು. ಈ ನಂಬರ್ ಬೆಂಗಳೂರಿನ ಒಂದು ಕಾರಿನದ್ದಾಗಿತ್ತು. ಈ ಕಾರು ತಲಪಾಡಿ ಟೋಲ್ಗೇಟ್ ದಾಟಿ ಹೋದ ಸ್ಪಷ್ಟ ದೃಶ್ಯ ಸಿಸಿಟಿವಿಯಲ್ಲಿ ಸಿಕ್ಕಿತ್ತು. ಇದರ ಆಧಾರದಲ್ಲಿ ಕಾರಿನ ಮೋಡೆಲ್ ಆಧರಿಸಿ ತನಿಖೆ ನಡೆಸಿದಾಗ ಅದರ ಮಾಲಕನನ್ನು ಪತ್ತೆಹಚ್ಚಲು ಸಾಧ್ಯವಾಗಿತ್ತು. ಅವರು ಆ ಕಾರನ್ನು ಮಾರಾಟ ಮಾಡಿದ್ದು ಈ ವ್ಯಕ್ತಿಯಿಂದ ಕಾರನ್ನು ದರೋಡೆಯ ಸೂತ್ರಧಾರ ಮುರುಗಂಡಿ ಥೇವರ್ ಖರೀದಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿತ್ತು. ಈ ಸುಳಿವು ಪೊಲೀಸರನ್ನು ಮುಂಬಯಿಯ ಧಾರಾವಿ ಸ್ಲಮ್ ಏರಿಯಾಕ್ಕೆ ಕರೆದೊಯ್ದಿತ್ತು. ಮುಂಬಯಿ ಪೊಲೀಸರ ನೆರವಿನಿಂದ ಕೊನೆಗೂ ದರೋಡೆಕೋರರನ್ನು ಸೆರೆ ಹಿಡಿಯಲು ಸಾಧ್ಯವಾಯಿತು.
ದರೋಡೆಗೆ ಪಕ್ಕಾ ಪ್ಲಾನ್ ಮಾಡಲಾಗಿತ್ತು. ಆದರೆ ಪ್ರತಿ ಅಪರಾಧ ಕೃತ್ಯದಲ್ಲಿ ಏನಾದರೊಂದು ಸುಳಿವ ಅಪರಾಧಿಗಳು ಬಿಟ್ಟು ಹೋಗುತ್ತಾರೆ ಎಂಬ ಅಪರಾಧ ಸಿದ್ಧಾಂತವೇ ದರೋಡೆಕೋರರನ್ನು ಪತ್ತೆಹಚ್ಚಲು ನೆರವಾಯಿತು. ಆರೋಪಿಗಳ ಎಲ್ಲ ಬಿಟ್ಟು ಬಹಳ ಕಡಿಮೆ ಬಳಕೆಯಲ್ಲಿರುವ ಹಳೇ ಫಿಯೆಟ್ ಕಾರನ್ನು ಈ ಕೃತ್ಯಕ್ಕೆ ಬಳಸಿದ್ದರು. ಹೀಗಾಗಿ ಈ ಕಾರಿನ ಮೂಲವನ್ನು ಪತ್ತೆಹಚ್ಚಲು ಪೊಲೀಸರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಕಾರಿನ ಮೂಲ ಸಿಕ್ಕಿದ್ದೇ ಒಂದೊಂದೇ ಲಿಂಕ್ ಬಿಚ್ಚುತ್ತಾ ಹೋಯಿತು.
ಜತೆಗೆ ಅಕ್ರಮ ಚಿನ್ನ ಖರೀದಿಸುವ ಮಾರುಕಟ್ಟೆಯಲ್ಲಿ ನಡೆದ ಸಣ್ಣ ಬೆಳವಣಿಗೆಯೂ ದರೋಡೆಕೋರರನ್ನು ಪತ್ತೆಹಚ್ಚಲು ನೆರವಾಯಿತು ಎನ್ನಲಾಗಿದೆ. ಸಾಮಾನ್ಯವಾಗಿ ದೊಡ್ಡ ಮಟ್ಟದ ಚಿನ್ನ ಕಳವು ನಡೆದರೆ ಕೊನೆಗೆ ಅದು ಹೋಗಿ ಸೇರುವುದು ಮುಂಬಯಿಯ ಅಕ್ರಮ ಮಾರುಕಟ್ಟೆಗೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಮಾರುಕಟ್ಟೆ ಮೇಲೂ ಒಂದು ಕಣ್ಣಿಟ್ಟಿದ್ದರು. ಇಲ್ಲಿ ಸಿಕ್ಕಿದ ಸುಳಿವು ಕೂಡ ನೆರವಾಗಿತ್ತು ಎನ್ನಲಾಗಿದೆ.