ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯಲ್ಲಿ ದ್ವಿಚಕ್ರ ವಾಹನ ಸವಾರರನ್ನು ತಡೆದು, ಬೈಕ್ಗೆ ಹೆಚ್ಚಿನ ಮೈಲೇಜ್ ನೀಡುವ ಸಾಧನ ಅಳವಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್ವೊಂದರ ಬಗ್ಗೆ ವರದಿಯಾಗಿದೆ.
ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಅಂಡರ್ಪಾಸ್ ಬಳಿ ಟೈಲರ್ ಒಬ್ಬರನ್ನು ತಡೆದ ಅಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ಬೈಕ್ಗೆ ಮೈಲೇಜ್ ಹೆಚ್ಚಿಸುವ ಡಿವೈಸ್ ಅಳವಡಿಸುತ್ತೇನೆ ಎಂದು ಹೇಳಿ 1,000 ರೂಪಾಯಿ ಬೇಡಿಕೆಯಿಟ್ಟಿದ್ದಾನೆ. ಈ ವಿಚಾರವಾಗಿ ಸವಾರ ಮತ್ತು ಆ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ವಂಚಕ ಅಲ್ಲಿಂದ ಪರಾರಿಯಾಗಿದ್ದಾನೆ.
ಉಪ್ಪಿನಂಗಡಿ ಮಾತ್ರವಲ್ಲ ಕೆಲ ಸಮಯಗಳ ಹಿಂದೆ ಪುತ್ತೂರಿನಲ್ಲಿಯೂ ಇದೇ ಗ್ಯಾಂಗ್ ಕಾರ್ಯಾಚರಿಸುತ್ತಿರುವ ಬಗ್ಗೆ ವರದಿಯಾಗಿದೆ. ನೇರವಾಗಿ ಸಾಧನವನ್ನು ಬೈಕಿಗೆ ಅಳವಡಿಸಲಾಗುತ್ತದೆ. ಕೊನೆಗೆ ಸಾಧನ ಅಳವಡಿಸಲಾಗಿದೆ, ಹಣ ನೀಡಬೇಕು ಎಂದು ವಾಗ್ವಾದಕ್ಕಿಳಿಯುತ್ತಾರೆ. ವಾಹನ ಸವಾರರು ಅನ್ಯ ದಾರಿಯಿಲ್ಲದೇ ಹಣ ನೀಡಿ ತೆರಳಿರುವ ಉದಾಹರಣೆ ಇದೆ. ಕೆಲ ಸಮಯಗಳ ಬಳಿಕ ವಾಹನದ ಕ್ಷಮತೆ ಕ್ಷೀಣಿಸುವಾಗಲೇ ಈ ಸಾಧನದ ಅಪಾಯ ಬೆಳಕಿಗೆ ಬಂದಿದೆ.
ಇದೇ ಮಾದರಿಯಲ್ಲಿ ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಈ ಗ್ಯಾಂಗ್ನಿಂದ ವಂಚನೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.























