ಬಂಟ್ವಾಳ: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ ( 21) ಎಂಬಾತನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಕಂಕನಾಡಿ ಪೋಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.ಜುಲೈ 27ರಂದು ಹೇಮಂತ್ ಮನೆಯಿಂದ ನಾಪತ್ತೆಯಾಗಿದ್ದ ಈ ಬಗ್ಗೆ ಜುಲೈ 28 ರಂದು ಸೋಮವಾರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಜುಲೈ 29 ರಂದು ಮಂಗಳವಾರ ಮಧ್ಯಾಹ್ನದ ವೇಳೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಡ್ಯಾಂ ಬಳಿ ಈತನ ದ್ವಿಚಕ್ರ ಹಾಗೂ ಮೊಬೈಲ್ ಅನಾಥವಾಗಿ ಪತ್ತೆಯಾಗಿತ್ತು.ಅದೇ ದಿನ ಮಧ್ಯಾಹ್ನದ ಬಳಿಕ ಸ್ಥಳೀಯ ಮುಳುಗುತಜ್ಞರ ತಂಡ, ಅಗ್ನಿ ಶಾಮಕ ದಳದವರು ಹಾಗೂ ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣಾ ಪೋಲೀಸರ ತಂಡ ನೇತ್ರಾವತಿ ನದಿ ತೀರದಲ್ಲಿ ನದಿಯಲ್ಲಿ ತೀವ್ರ ಹುಡುಕಾಟ ನಡೆಸಿತ್ತು. ಆದರೆ ಸಂಜೆವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ವಾಹನ ಹಾಗಾಗಿ ಜುಲೈ 30 ರಂದು ಮತ್ತೆ ಬೆಳಿಗ್ಗೆಯಿಂದಲೇ ಅದೇ ತಂಡ ಜಕ್ರಿಬೆಟ್ಟು ಡ್ಯಾಂ ನಿಂದ ತುಂಬೆ ಡ್ಯಾಂವರೆಗೂ ಶೋಧ ನಡೆಸಿದೆಯಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಜುಲೈ 31 ರಂದು ಮತ್ತೆ ಕಡೇಶಿವಾಲಯ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪ್ರಮುಖರಾದ ಸಂಪತ್ ಸುವರ್ಣ ಅವರ ಮುತುವರ್ಜಿಯಿಂದ ಈಶ್ವರಿ ಮಲ್ಪೆ ಅವರ ತಂಡವನ್ನು ಹಾಗೂ ಎನ್.ಡಿ.ಆರ್.ಎಫ್ ತಂಡವನ್ನು ಕರೆಸಿಕೊಂಡು ಅಗ್ನಿಶಾಮಕ ದಳದ ಜೊತೆ ಜಂಟಿಯಾಗಿ ಸ್ಥಳೀಯ ಈಜುಗಾರ ನಿಸಾರ್ ಅವರೊಂದಿಗೆ ಜಕ್ರಿಬೆಟ್ಟುವಿನಿಂದ ತುಂಬೆವರೆಗೂ ಶೋಧ ನಡೆಸಿತ್ತು.