ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರಧ್ವಜ ಬೇಸಿಗೆಯ ಮಳೆಗೆ ಧರಾಶಾಹಿಯಾಗಿರುವುದು ತಿಳಿದ ವಿಚಾರ. ಮೊದಲ ಮಳೆಗೆ ನೆಲಕ್ಕುರುಳಿದರೆ ಇನ್ನು ಮಳೆಗಾಲದಲ್ಲಿ ಹೇಗೆ? ಇನ್ನು ಹೊಸ ರಾಷ್ಟ್ರಧ್ವಜ ಹಾರಾಡುವುದು ಯಾವಾಗ? ಈ ಎಲ್ಲಾ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಅಡ್ಡಾಡುತ್ತಿದೆ.
78 ಮೀಟರ್ ಎತ್ತರ. 2400 ಚದರ ಅಡಿಯಷ್ಟು ವಿಸ್ತೀರ್ಣ. ಇದು ಪುತ್ತೂರಿನ ರಾಷ್ಟ್ರಧ್ವಜದ ಹಿರಿಮೆ. ತಾಲೂಕು ಕೇಂದ್ರದಲ್ಲಿ ಇಷ್ಟು ದೊಡ್ಡ ರಾಷ್ಟ್ರಧ್ವಜ ಬೇರೆಲ್ಲೂ ಇಲ್ಲ.
1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಧ್ವಜ ತಿಂಗಳಾಗುವುದರೊಳಗಾಗಿ ನೆಲಕ್ಕುರುಳಿದೆ. ಕಾರಣ ಕೇಳಿದಾಗ – ಹೀಗಾಗುವುದು ಸಾಮಾನ್ಯ. ಎತ್ತರದಲ್ಲಿ ಗಾಳಿಯೂ ಹೆಚ್ಚು. ಮಳೆ ನೀರು ಬಿದ್ದಾಗ ಒದ್ದೆಯಾಗಿ, ಧ್ವಜಕಂಬಕ್ಕೆ ಸಿಲುಕಿಸಿರುವ ಧ್ವಜ ಹರಿದು ನೆಲಕ್ಕೆ ಬಿದ್ದಿದೆ ಎನ್ನುತ್ತಾರೆ.
ಧ್ವಜ ನೆಲಕ್ಕುರುಳಿದೆ ಎನ್ನುವ ಮಾಹಿತಿ ತಿಳಿದಾಕ್ಷಣ ನಗರಸಭೆಯಿಂದ ಧ್ವಜವನ್ನು ಸುರಕ್ಷಿತವಾಗಿ ಇಡಲಾಗಿದೆ. ಧ್ವಜ ಕಂಬದಲ್ಲೇ ಬಾಕಿಯಾಗಿದ್ದ ಧ್ವಜದ ಒಂದು ಭಾಗವನ್ನು ತೆರವು ಮಾಡಲಾಗಿದೆ.
ಹವಾಮಾನಕ್ಕೆ ಮಣೆ;
ಈ ಬಗ್ಗೆ ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಪ್ರತಿಕ್ರಿಯಿಸಿ, ಹವಾಮಾನ ಇಲಾಖೆಯ ಪ್ರಕಾರ ಇನ್ನು ಕೆಲ ದಿನ ಮಳೆ ಸುರಿಯಲಿಕ್ಕಿದೆ. ನಂತರವಷ್ಟೇ ಧ್ವಜ ಹಾರಾಟ. ಮಂಗಳೂರು ಹಾಗೂ ಉಳ್ಳಾಲದಲ್ಲೂ ರಾಷ್ಟ್ರಧ್ವಜ ಹಾರಾಡುತ್ತಿವೆ. ಅಲ್ಲಿನ ಗಾಳಿಯಲ್ಲಿ ಉಪ್ಪಿನ ಅಂಶ ಹೆಚ್ಚಿರುವುದರಿಂದ ಧ್ವಜ ಕೆಳಕ್ಕುರುಳುವುದು ಸಾಮಾನ್ಯವಾಗಿತ್ತು. ಹಾಗಾಗಿ ಆಯ್ದ ದಿನಗಳಲ್ಲಿ ಮಾತ್ರ ರಾಷ್ಟ್ರಧ್ವಜವನ್ನು ಹಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.
10ರಲ್ಲಿ 1 ರಾಷ್ಟ್ರಧ್ವಜಕ್ಕೆ ಹಾನಿ:
ನವದೆಹಲಿಯ ಫ್ಲ್ಯಾಗ್ ಕಂಪೆನಿಯಲ್ಲಿ ಒಟ್ಟು 10 ರಾಷ್ಟ್ರಧ್ವಜವನ್ನು ತಯಾರಿಸಿ, ಪುತ್ತೂರಿಗೆ ತರಲಾಗಿದೆ. ಒಂದು ಧ್ವಜಕ್ಕೆ 40 ಸಾವಿರ ರೂ. ಬೆಲೆಯಿದ್ದು, 4 ಲಕ್ಷ ರೂ. ವೆಚ್ಚದಲ್ಲಿ 10 ರಾಷ್ಟ್ರಧ್ವಜ ನಿರ್ಮಿಸಲಾಗಿತ್ತು. ಇದರಲ್ಲಿ ಒಂದನ್ನು ಫೆ. 17ರಂದು ಹಾರಿಸಲಾಗಿತ್ತು. ಆ ರಾಷ್ಟ್ರಧ್ವಜ ಮೊದಲ ಮಳೆಗೆ ನೆಲಕ್ಕುರುಳಿತು. ಇನ್ನು 9 ರಾಷ್ಟ್ರಧ್ವಜಗಳು ನಗರಸಭೆಯಲ್ಲಿ ಭದ್ರವಾಗಿವೆ.




















