ಮಂಗಳೂರು : ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಿಸಲಾಗಿದೆ ಎಂಬ ಆರೋಪ ನಿರಾಧಾರವಾಗಿದೆ. ಪಂಬದ ಸಮುದಾಯದ ಗಣೇಶ್ ಪದವಿನಂಗಡಿ ಅವರ ಪುತ್ರನಾದ ಸುಶಾಂತ್ ಬಂಗೇರ ಅವರ ಜಾತಿ ಪ್ರಮಾಣ ಪತ್ರ ಹಾಗೂ ಇತರ ದಾಖಲೆಗಳಲ್ಲಿ ಅವರು ಪಂಬದ ಸಮುದಾಯಕ್ಕೆ ಸೇರಿದವರೆಂದ ದೃಢೀಕರಣವಿದೆ ಎಂದು ಹಿರಿಯ ದೈವ ನರ್ತಕ ಚಿಪ್ಪಾರು ಗಣೇಶ್ ಪಂಬದ ಹೇಳಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಇತ್ತೀಚೆಗೆ ಪಂಬದ ಸಮುದಾಯದ ಡಾ. ರತಿ ಎಂಬವರು ಮಾಡಿರುವ ಆರೋಪವನ್ನು ನಿರಾಕರಿಸಿದ ಅವರು, ಸುಶಾಂತ್ ಬಂಗೇರ ಕ್ರೈಸ್ತ ಸಮುದಾಯಕ್ಕೆ ಸೇರಿದವರು ಎಂಬುದಕ್ಕೆ ಅಧಿಕೃತ ದಾಖಲೆಯನ್ನು ಮಾಧ್ಯಮದ ಎದುರು ನೀಡಬೇಕು. ನಮ್ಮಲ್ಲಿ ಅವರು ಪಂಬದ ಸಮುದಾಯಕ್ಕೆ ಸೇರಿದವರು ಎಂಬ ಬಗ್ಗೆ ಅಗತ್ಯ ಕಾನೂನು ದಾಖಲೆಗಳಿವೆ ಎಂದರು.
ಗಣೇಶ್ ಪದವಿನಂಗಡಿಯವರು ಮದುವೆ ಆಗಿರುವುದು ಕ್ರೈಸ್ತ ಸಮುದಾಯ ಮಹಿಳೆಯನ್ನು. ಆದರೆ ಅವರು ವಿವಾಹದ ಬಳಿಕ ಹಿಂದೂ ಸಂಪ್ರದಾಯ ಹಾಗೂ ಪಂಬದ ಜಾತಿಯ ನೀತಿ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಒಂದು ಹೆಣ್ಣು ತನ್ನ ಮೂಲ ಧರ್ಮವನ್ನು ಬಿಟ್ಟು ಮತ್ತೊಂದು ಧರ್ಮಕ್ಕೆ ಬಂದಾಗ ಅಲ್ಲಿನ ಆಚಾರ ವಿಚಾರ ಪದ್ಧತಿ ಅನಸರಿಸಿದಾಗ ಅವರು ಆ ಸಮುದಾಯದವರಾಗುತ್ತಾರೆ. ಹಾಗೆಯೇ ಗಣೇಶ್ ಪದವಿನಂಗಡಿ ಅವರ ಪತ್ನಿ ಸವಿತಾ ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾಗಿ ಸುಶಾಂತ್ ಪಂಬದರನ್ನು ಮಗುವಾಗಿ ಪಡೆದಿದ್ದಾರೆ. ಅವರು ತಮ್ಮ ತಂದೆಯ ಕುಲ ವೃತ್ತಿಯನ್ನೇ ಮುಂದುವರಿಸಿಕೊಂಡು ಬಂದಿದ್ದು, ಕಳೆದ 13 ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾರಕೂರಿನಿಂದ ಮಂಗಳೂರುವರೆಗೆ ಬಂಟ, ಪಿಲಿಚಾಮುಂಡಿ ನರ್ತನ ಮಾಡಿಕೊಂಡು ಪ್ರಶಂಸೆಗೂ ಪಾತ್ರರಾಗಿದ್ದಾರೆ. ಹಾಗಿದ್ದರೂ ಅವರು ಕ್ರಿಶ್ಚಿಯನ್ ಎಂಬ ಆರೋಪ ಹೊರಿಸಿರುವುದು ಪಂಬದ ಸಮುದಾಯ ಮಾತ್ರವಲ್ಲದೆ, ದೈವಾರಾಧನೆಯ ನರ್ತನ ಸೇವೆಯಲ್ಲಿ ತೊಡಗಿಕೊಂಡಿರುವ ಎಲ್ಲಾ ಸಮುದಾಯಗಳಿಗೆ ಮಾಡಿರುವ ಅವಮಾನ ಎಂದು ಸೂರಜ್ ಚಿಪ್ಪಾರು ಹೇಳಿದರು.
ನಾನು ಮತ್ತು ನನ್ನ ಮಕ್ಕಳು ಯಾವುದೇ ಚರ್ಚ್ನಲ್ಲಿ ದಾಖಲಾತಿ ಹೊಂದಿದ್ದಲ್ಲಿ ಅದನ್ನು ಆರೋಪ ಮಾಡಿದವರು ತಂದು ತೋರಿಸಲಿ. ಈ ರೀತಿಯ ಆರೋಪಗಳಿಂದಾಗಿ ನನ್ನ ಮಗ ಕೆಲಸ ಇಲ್ಲದೆ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ರತಿ ಎಂಬವರು ನನ್ನ ಹಿರಿಯ ಪುತ್ರನಿಂದ ನೇಮ ಕಟ್ಟಿಸಿದ್ದಾರೆ. ಈಗ ಯಾವುದೋ ವೈಯಕ್ತಿಕ ದ್ವೇಷದಿಂದ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಸವಿತಾ ಅವರು ಹೇಳಿದರು.
ಯಾವ ವರ್ಗವೂ ದೈವಾರಾಧನೆ ಮಾಡಬಾರದು ಎಂದಿಲ್ಲ. ಆದರೆ ಯಾವುದೇ ರೀತಿಯಲ್ಲಿ ಅಪಚಾರ ಮಾಡುವಂತಿರಬಾರದು. ಅದೇ ರೀತಿ ಅನ್ಯ ಧರ್ಮದ ಹೆಸರು ಹೇಳಿ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡಲು ಅವಕಾಶ ನೀಡಬಾರದು ಎಂದು ಕಮಲಾಕ್ಷ ಪಂಬದ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸುಶಾಂತ್ ಬಂಗೇರ, ಗಣೇಶ್ ಕಜೆ ಉಪಸ್ಥಿತರಿದ್ದರು.




















