ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಬ್ಯಾಗ್ ಪತ್ತೆಯಾಗಿದೆ. ಇದರಲ್ಲಿ 6.54 ಕೆಜಿ ಚಿನ್ನ ಹಾಗೂ 41.04 ಲಕ್ಷ ರೂಪಾಯಿ ನಗದು ದೊರೆತಿದೆ.
ಸೆ.16ರಂದು ಸಂಜೆ ಮೂವರು ದರೋಡೆಕೋರರು ಬ್ಯಾಂಕ್ನ ಆರು ಜನ ಸಿಬ್ಬಂದಿ ಹಾಗೂ ನಾಲ್ವರು ಗ್ರಾಹಕರಿಗೆ ಪಿಸ್ತೂಲ್, ಚಾಕುಗಳ ತೋರಿಸಿ, ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದರು. ಬ್ಯಾಂಕ್ನಲ್ಲಿದ್ದ 1.04 ಕೋಟಿ ರೂ. ಮತ್ತು 20 ಕೆಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಂಟು ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು.
ಅಂದು ರಾತ್ರಿಯೇ ಕದ್ದ ಚಿನ್ನ ಹಾಗೂ ಹಣದೊಂದಿಗೆ ಕಾರಿನಲ್ಲಿ ಆರೋಪಿಗಳು ಮಹಾರಾಷ್ಟ್ರದ ಪಂಢರಾಪುರದತ್ತ ಹೋಗುತ್ತಿದ್ದಾಗ ಸೋಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದ ಬಳಿ ಕಾರು ಅಪಘಾತಕ್ಕೆ ಈಡಾಗಿತ್ತು. ಇದರಿಂದ ಕಾರನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಓಡಿ ಹೋಗಿದ್ದರು. ಅಲ್ಲದೇ, ಈ ಕಾರಿನಲ್ಲಿ ಸ್ವಲ್ಪ ಹಣ ಹಾಗೂ ಚಿನ್ನಾಭರಣ ಸಹ ದೊರೆತಿತ್ತು.
ಹೀಗಾಗಿ ಆರೋಪಿಗಳ ಪತ್ತೆಗೆ ಮಹಾರಾಷ್ಟ್ರ ಪೊಲೀಸರೊಂದಿಗೆ ರಾಜ್ಯ ತನಿಖಾ ತಂಡಗಳು ಜಂಟಿ ಕಾರ್ಯಾಚರಣೆ ಕೈಗೊಂಡಿವೆ. ಇದೀಗ ಅದೇ ಹುಲಜಂತಿ ಗ್ರಾಮದಲ್ಲಿ ಗುರುವಾರ ಸಂಜೆ ಬ್ಯಾಗ್ವೊಂದು ಪತ್ತೆಯಾಗಿದೆ.
ಈ ಕುರಿತು ಶುಕ್ರವಾರ ಚಡಚಣ ಪೊಲೀಸ್ ಠಾಣೆಯಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.