ಕೌಟುಂಬಿಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು ಬಳಿಕ ಮೃತದೇಹವನ್ನು ಟ್ರ್ಯಾಲಿ ಸೂಟ್ಕೇಸ್ನಲ್ಲಿ ತುಂಬಿರುವ ಘಟನೆ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿದೆ.
ದೊಡ್ಡಕಮ್ಮನಹಳ್ಳಿ ನಿವಾಸಿ ಗೌರಿ ಅನಿಲ್ ಸಾಂಬೇಕರ್ (32) ಕೊಲೆಯಾದ ಮಹಿಳೆ. ಕೊಲೆಗೈದ ಪತಿ ರಾಕೇಶ್ ರಾಜೇಂದ್ರ ಖೆಡೇಕರ್ (36) ನನ್ನು ಪುಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಾರಣಕ್ಕೆ ಹತ್ಯೆ ನಡೆದಿರುವ ಸಾಧ್ಯತೆಯಿದೆ. ಗುರುವಾರ ಸಂಜೆ ಮನೆ ಮಾಲಿಕರು ನೀಡಿದ ಮಾಹಿತಿ ಮೇರೆಗೆ ಹುಳಿಮಾವು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಸಿ ಪರಿಶೀಲಿಸಿದಾಗ ಮನೆಯ ಶೌಚಾಲಯದಲ್ಲಿದ್ದ ಸೂಟ್ಕೇಸ್ನಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಮಹಾರಾಷ್ಟ್ರ ಮೂಲದ ಗೌರಿ ಮತ್ತು ರಾಕೇಶ್ 2 ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದು, ದೊಡ್ಡಕಮ್ಮನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗೌರಿ ಸಮೂಹ ಸಂವಹನ ಮಾಧ್ಯಮ ಪದವೀಧರೆಯಾಗಿದ್ದು, ಪತಿ ರಾಕೇಶ್ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಕೆಲಸ ಮಾಡುತ್ತಿದ್ದ. ಗೌರಿ ಕೂಡ ಕೆಲಸಕ್ಕಾಗಿ ಶೋಧಿಸುತ್ತಿದ್ದರು. ಮನೆಯಲ್ಲೇ ಇಬ್ಬರೇ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಮನೆ ಮಾಲಿಕರಿಗೆ ಕರೆ ಮಾಡಿದ್ದ ಹಂತಕ ಪತಿ
ಮಾ.25ರಂದು ಆರೋಪಿ ರಾಕೇಶ್ ಪತ್ನಿ ಗೌರಿಯನ್ನು ಹತ್ಯೆಗೈದಿದ್ದಾನೆ. ಬಳಿಕ ಮೃತದೇಹವನ್ನು ಟ್ರ್ಯಾಲಿ ಸೂಟ್ಕೇಸ್ನಲ್ಲಿ ತುಂಬಿದ್ದಾನೆ. ಬಳಿಕ ಅದನ್ನು ಹೊರಗಡೆ ಸಾಗಿಸಲು ಯತ್ನಿಸಿದ್ದಾನೆ. ಆದರೆ, ಸಾಧ್ಯವಾಗಿಲ್ಲ. ಬಳಿಕ ಮನೆಯ ಶೌಚಾಲಯದಲ್ಲಿ ಸೂಟ್ಕೇಸ್ ಇರಿಸಿ ಮನೆಯ ಬಾಗಿಲು ಹಾಕಿಕೊಂಡು ಮುಂಬೈಗೆ ಪರಾರಿಯಾಗಿದ್ದ. ಮಾ.27 ಸಂಜೆ ಸುಮಾರು 5.30ಕ್ಕೆ ಮನೆ ಮಾಲಿಕರಿಗೆ ಕರೆ ಮಾಡಿರುವ ರಾಕೇಶ್, ವೈಯಕ್ತಿಕ ಕಾರಣಕ್ಕೆ ಪತ್ನಿ ಗೌರಿಯನ್ನು ಕೊಲೆ ಮಾಡಿದ್ದೇನೆ. ಮೃತದೇಹವನ್ನು ಮನೆಯ ಸೂಟ್ಕೇಸ್ನಲ್ಲಿ ಇರಿಸಿರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದ. ಅದೇ ವೇಳೆ ಮಹಾರಾಷ್ಟ್ರ ಪೊಲೀಸರಿಗೂ ಕರೆ ಮಾಡಿ, ಬೆಂಗಳೂರಿನಲ್ಲಿ ಪತ್ನಿಯನ್ನು ಕೊಲೆಗೈದಿದ್ದೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ
ಇತ್ತ ಮನೆ ಮಾಲಿಕರು ಗಾಬರಿಗೊಂಡು ಕೂಡಲೇ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಮತ್ತೂಂದೆಡೆ ಮಹಾರಾಷ್ಟ್ರ ಪೊಲೀಸರೂ ರಾಜ್ಯದ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಷ್ಟರಲ್ಲಾಗಲೇ ಹುಳಿಮಾವು ಪೊಲೀಸರು, ಎಫ್ಎಎಲ್ ಮತ್ತು ಸೋಕೋ ತಂಡದ ಜೊತೆ ಮನೆಗೆ ತೆರಳಿ ಪರಿಶೀಲಿಸಿದಾಗ ಸೂಟ್ಕೇಸ್ನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ವಿವಿಧೆಡೆ ಚಾಕುವಿನಿಂದ ಇರಿದು ಹತ್ಯೆ
ಮನೆ ಮಾಲಿಕರ ಕರೆ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲಿಸಿದಾಗ ಸೂಟ್ಕೇಸ್ನಲ್ಲಿ ಮೃತದೇಹ ಪತ್ತೆಯಾಗಿತ್ತು. ಆರೋಪಿ ಚಾಕುವಿನಿಂದ ಗೌರಿಯ ದೇಹದ ವಿವಿಧೆಡೆ ಇರಿದು ಹತ್ಯೆಗೈದಿದ್ದಾನೆ ಎಂಬುದು ಗೊತ್ತಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆಗ್ನೆಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಪುಣೆಯಲ್ಲಿ ಆರೋಪಿ ರಾಕೇಶ್ ಬಂಧನ
ಗೌರಿ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತಳ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.
ಮತ್ತೂಂದೆಡೆ ಹುಳಿಮಾವು ಪೊಲೀಸರು ಆರೋಪಿಯ ಮೊಬೈಲ್ ಸಿಡಿಆರ್ ಮಾಹಿತಿ ಸಂಗ್ರಹಿಸಿದಾಗ ಆತ ಪುಣೆಯಲ್ಲಿರುವುದು ಗೊತ್ತಾಗಿದೆ. ಕೂಡಲೇ ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪುಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಾಡಿ ವಾರೆಂಟ್ ಪಡೆದು ಕರೆತರಲು ವಿಶೇಷ ತಂಡ ಪುಣೆಗೆ ತೆರಳಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪೊಲೀಸ್ ಸಹಾಯವಾಣಿಗೆ ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದಾಗ ಮನೆಯೊಳಗೆ ಸೂಟ್ಕೇಸ್ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಚಾಕುವಿನಿಂದ ಇರಿದು ಮಹಿಳೆಯನ್ನು ಹತ್ಯೆಗೈಯಲಾಗಿದೆ. ಆರೋಪಿಯನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ತನಿಖೆ ಮುಂದುವರಿದಿದೆ.