ಮಂಡ್ಯ: ಆರ್ಎಸ್ಎಸ್ ಕಚೇರಿಗೆ ಏಕಾಏಕಿ ಪೊಲೀಸರು ತಡರಾತ್ರಿ ನುಗ್ಗಿರುವ ಘಟನೆ ಮಂಡ್ಯದ ಪಾಂಡವಪುರದಲ್ಲಿ ನಡೆದಿದೆ.
RSS ಕಚೇರಿಗೆ ನುಗ್ಗಿದ ಪೊಲೀಸರು ಕಾರ್ಯಕರ್ತರನ್ನು ಬಂಧಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ರಸ್ತೆ ತಡೆ ನಡೆಸಿದರು.
ಶರಣ್ ಪಂಪ್ವೆಲ್ ಮಂಡ್ಯಕ್ಕೆ ಬಂದಿದ್ದಾರೆಂಬ ಮಾಹಿತಿಯ ಮೇಲೆ ಪೊಲೀಸರು ಆರ್ಎಸ್ಎಸ್ ಕಚೇರಿಗೆ ತೆರಳಿದ್ದರು. ಆದರೆ ಪೊಲೀಸರಿಗೆ ಶರಣ್ ಪಂಪ್ವೆಲ್ ಅಥವಾ ಬೇರಾವುದೇ ವ್ಯಕ್ತಿಗಳ ಮುಖ ಪರಿಚಯ ಇರಲಿಲ್ಲ. ಹೀಗಾಗಿ ಅಲ್ಲಿದ್ದ ಕಾರ್ಯಕರ್ತರನ್ನೇ ಬಂಧಿಸಲು ಮುಂದಾದರು ಎಂದು ಆರೋಪಿಸಲಾಗಿದೆ. ಆದರೆ ಸುತ್ತಮುತ್ತಲಿದ್ದ ಜನರು ಒಗ್ಗೂಡಿ ಯಾವುದೇ ನೋಟಿಸ್ ಅಥವಾ ಎಫ್ಐಆರ್ ಇಲ್ಲದೇ ಹೀಗೆ ಎಳೆದೊಯ್ಯಲು ಸಾಧ್ಯವಿಲ್ಲ ಎಂದು ಪ್ರತಿಭಟಿಸಿ ಪೊಲೀಸರು ಹೋಗದಂತೆ ತಡೆದಿದ್ದಲ್ಲದೆ ಎಸ್ಪಿ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟುಹಿಡಿದರು.
ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಅಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕಚೇರಿಯ ಒಳಗೆ ಬೂಟುಗಾಲಿನಲ್ಲಿ ನುಗ್ಗಿದ ಎಲ್ಲಾ ಪೊಲೀಸರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.